ಕೃಷ್ಣಾ ತಾಯಿಗೆ ಗಂಗಾ ಪೂಜೆ ಸಲ್ಲಿಸಿದ ಮೀನುಗಾರರು
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ವರ್ಷಪೂರ್ತಿ ಅನ್ನ ನೀಡುವ ಕೃಷ್ಣಾ ಮಾತೆಗೆ ಆಲಮಟ್ಟಿ ಜಲಾಶಯದ ಮುಂಭಾಗದ ಅರಳದಿನ್ನಿ ಗ್ರಾಮದ ಮೀನುಗಾರರು ಬುಧವಾರ ಕಡ್ಲಿಗರ ಹುಣ್ಣಿಮೆ ನಿಮಿತ್ತ ಗಂಗಾ ಪೂಜೆ ಸಲ್ಲಿಸಿದರು.
ಬೆಳಿಗ್ಗೆಯಿಂದಲೇ ಕರಿಗಡಬು ಮತ್ತು ಇತರ ನೈವೇದ್ಯ ತಯಾರಿಸಿ ಜಲಾಶಯದ ಮುಂಭಾಗದ ಕೃಷ್ಣಾ ನದಿ ತೀರದಲ್ಲಿ ಪೂಜೆ ಸಲ್ಲಿಸಲಾಯಿತು. ನಂತರ ನದಿಗೆ ಇಳಿದು ನೈವೇದ್ಯ, ದಕ್ಷಿಣೆ ಸಮೇತ ಎಲ್ಲವನ್ನೂ ಕೃಷ್ಣಾ ಮಾತೆಗೆ ಅರ್ಪಿಸಲಾಯಿತು.
“ವರ್ಷಪೂರ್ತಿ ನಮ್ಮ ಬದುಕಿಗೆ ಅನ್ನ ಹಾಕುವ ಹಾಗೂ ನಮ್ಮನ್ನು ರಕ್ಷಿಸುವವಳು ಕೃಷ್ಣಾ ಮಾತೆ. ಹೀಗಾಗಿ ವರ್ಷಕೊಮ್ಮೆ ಕಡ್ಲಿಗರ ಹುಣ್ಣಿಮೆಯಂದು ನಾವೆಲ್ಲರೂ ಸೇರಿ ಪೂಜೆ ಸಲ್ಲಿಸುತ್ತೇವೆ. ಈ ದಿನ ಅರಳದಿನ್ನಿಯ ಯಾವೊಬ್ಬ ಮೀನುಗಾರರೂ ಬಲೆ ಹಾಕಿ ಮೀನು ಹಿಡಿಯುವುದಿಲ್ಲ” ಎಂದು ಮೀನುಗಾರ ಮಹೇಶ ಮಾದರ ತಿಳಿಸಿದರು.
ಈ ಸಂದರ್ಭದಲ್ಲಿ ಮೀನುಗಾರರಾದ ನೀಲಪ್ಪ ಮಾದರ, ಅನಿಲ ವಾಲಿಕಾರ, ಮಹಾಂತೇಶ ಧನವೆ, ನಿಜಪ್ಪ ಮಾದರ, ಮಂಜುನಾಥ ಮಾದರ, ಶರಣಪ್ಪ ಮಾದರ, ಯಲಗೂರದಪ್ಪ ಮಾದರ, ದುರ್ಗಪ್ಪ ಮಾದರ, ಸದ್ದಾಂ ಕಂಕಣಪೀರ, ಗೈಬು ಕಂಕಣಪೀರ, ಚಂದ್ರು ಮಾದರ ಸೇರಿದಂತೆ ಹಲವರು ಇದ್ದರು.
ಅಲ್ಲಿಗೆ ಬಂದಿದ್ದ ಎಲ್ಲರಿಗೂ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

