ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಬಲೇಶ್ವರ ತಾಲೂಕು ಕೇಂದ್ರಕ್ಕೆ ಅಗತ್ಯವಾಗಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಸೋಮವಾರ ಮುಸ್ಸಂಜೆ ಬಬಲೇಶ್ವರ ಪಟ್ಟಣದಲ್ಲಿ ₹200 ಲಕ್ಷ ವೆಚ್ಚದ ತಾಲೂಕು ಕ್ರೀಡಾಂಗಣ ₹300 ಲಕ್ಷ ವೆಚ್ಚದ ಅಗ್ನಿಶಾಮಕ ಠಾಣೆ, ₹575 ಲಕ್ಷ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬಬಲೇಶ್ವರದ ಅಭಿವೃದ್ಧಿಗೆ ಮತ್ತೊಂದು ಐತಿಹಾಸಿಕ ಹೆಜ್ಜೆ ಇದಾಗಿದೆ. ಯುವ ಪ್ರತಿಭೆಗಳ ಕನಸುಗಳಿಗೆ ವೇದಿಕೆಯಾಗುವ ಕ್ರೀಡಾಂಗಣ, ಜನರ ಜೀವ-ಆಸ್ತಿಯ ರಕ್ಷಣೆಗೆ ಇನ್ನಷ್ಟು ಶಕ್ತಿ ತುಂಬುವ ಅಗ್ನಿಶಾಮಕ ಠಾಣೆ ಹಾಗೂ ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಸುಸಜ್ಜಿತ ಆರೋಗ್ಯ ಕೇಂದ್ರಕ್ಕೆ ಭೂಮಿ ಪೂಜೆ ಮಾಡಲಾಗಿದೆ. ಇವು ಕೇವಲ ಕಟ್ಟಡಗಳಲ್ಲ. ಜನರ ಬದುಕಿನ ಗುಣಮಟ್ಟವನ್ನು ಬದಲಾಯಿಸುವ ಅಭಿವೃದ್ಧಿಯ ಬುನಾದಿಗಳಾಗಿವೆ. ಜನರ ಆಶೀರ್ವಾದವೇ ನಮ್ಮ ಶಕ್ತಿ. ಅಭಿವೃದ್ಧಿಯೇ ನಮ್ಮ ಆದ್ಯತೆ. ಬಬಲೇಶ್ವರದ ಪ್ರಗತಿಯ ಪಯಣ ನಿರಂತರವಾಗಿರಲಿದೆ ಎಂದು ಅವರು ಹೇಳಿದರು.
ಹಿಂದೆ ಬಬಲೇಶ್ವರ ತಾಲೂಕಿಗಾಗಿ ಹೋರಾಟ ನಡೆದಾಗ ನಾನು ಶಾಸಕನಾಗಿರದಿದ್ದರೂ ಹೋರಾಟಗಾರರ ಮನವಿ ಮೇರೆಗೆ ಕೃಷ್ಣ ಅವರ ಸರಕಾರದಲ್ಲಿ ತಾಲೂಕಿ ಕೇಂದ್ರ ಘೋಷಣೆ ಮಾಡಿಸಿದ್ದೇ. ಮುಂದೆ ಶತ ಪ್ರಯತ್ನ ಮಾಡಿ ಮುಳವಾಡ ಏತ ನೀರಾವರಿಯಲ್ಲೂ ಕ್ಷೇತ್ರವನ್ನು ಸೇರಿಸಿ ಸಿದ್ಧೇಶ್ವರ ಶ್ರೀಗಳ ಆಶಯದಂತೆ ನೀರು ಹರಿಸಿದ್ದೇನೆ. ಬಬಲೇಶ್ವರ ಸೇರಿ ಜಿಲ್ಲೆಯ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಯುವಕರಿಗಾಗಿ ಇಲ್ಲಿ ಶೀಘ್ರದಲ್ಲಿ ಅತ್ಯಾಧುನಿಕ ಜಿಮ್ ಆರಂಭಿಸಲಾಗುವುದು. ಎಲ್ಲ ಶಾಲೆಗಳಿಗೆ ಸಲಕರಣೆಗಳನ್ನು ನೀಡಲಾಗಿದೆ. 8 ರಿಂದ10ನೇ ತರಗತಿ ಈಗ ಸ್ಮಾರ್ಟಕ್ಲಾಸ್ ಸೌಲಭ್ಯ ಒದಗಿಸಲಾಗಿದ್ದು, ಮುಂಬರುವ ದಿನಗಳಲ್ಲಿ 5ನೇ ತರಗತಿಯಿಂದ 7ನೇ ತರಗತಿಗಳಿಗೂ ಸ್ಮಾರ್ಟ್ ಕ್ಲಾಸ್ ಸೌಲಭ್ಯಗಳನ್ನು ವಿಸ್ತರಿಸಲಾಗುವುದು. ಕೆರೆ ತುಂಬಿಸುವ ಯೋಜನೆ ಸಫಲವಾಗಿದ್ದು, ಈಗ ಹಳ್ಳಗಳನ್ನು ತುಂಬುವ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಈ ಸಲ ದ್ರಾಕ್ಷಿ ಬೆಳೆದು ಹಲವಾರು ರೈತರು ಕೋಟಿಗಟ್ಡಲೇ ಆದಾಯ ಗಳಿಸಿದ್ದಾರೆ. ಹೀಗಾಗಿ ಯಾರೂ ತಮ್ಮ ಭೂಮಿಗಳನ್ನು ಮಾರಬೇಡಿ. ಈ ಭೂಮಿ ನಿಮಗಷ್ಟೇ ಅಲ್ಲ, ನಿಮ್ಮ ಮುಂದಿನ ಪೀಳಿಗೆಗೂ ಬದುಕು ಕಟ್ಟಿಕೊಳ್ಳಲು ಅಗತ್ಯವಾಗಿದೆ. ಈ ಭೂಮಿಗೆ ಬಂಗಾರದ ನನ್ನ ಬೆಲೆ ತರುವ ಕೆಲಸವನ್ನು ಕ್ಷೇತ್ರದಲ್ಲಿ ಮಾಡಿರುವ ತೃಪ್ತಿ ತಮಗಿದೆ. ಇಲ್ಲಿನ ಶ್ರೀ ಗುರುಪಾದೇಶ್ವರು, ಶಾಂತವೀರ ಅಪ್ಪಗಳ ಆಶೀರ್ವಾದ ಸದಾ ನನ್ನ ಮೇಲಿದೆ ಇದೆ ಎಂದು ಸಚಿವರು ಹೇಳಿದರು.
ಮುಖಂಡ ವಿ. ಎನ್. ಬಿರಾದಾರ ಮಾತನಾಡಿ, ಸಚಿವ ಎಂ. ಬಿ. ಪಾಟೀಲರು ಬಬಲೇಶ್ವರಕ್ಕೆ ಕಲ್ಪವೃಕ್ಷವಾಗಿದ್ದರೆ. ನಾವು ಕೇಳಿದ್ದಕ್ಕಿಂತ ಹೆಚ್ಚು ಅಭಿವೃದ್ಧಿ ಕಾರ್ಯ ಮಾಡಿ ಎಲ್ಲ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ. ಅಭಿವೃದ್ಧಿಯಲ್ಲಿ ಎಲ್ಲರಿಗಿಂತಲೂ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಕಾಯಕದ ಮೂಲಕ ಇನ್ನೂ ಹೆಚ್ಚಿನ ಸ್ಥಾನ ಅಲಂಕರಿಸಲಿದ್ದಾರೆ. ಶ್ರೀ ಗುರುಪಾದೇಶ್ವರರು ಮತ್ತು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಆಶೀರ್ವಾದ ಸಚಿವರ ಮೇಲಿದೆ. ಇಂಥ ಆದರ್ಶವಂತದರಿಗೆ ಯುವಕರು ಸೇರಿದಂತೆ ನಾವೆಲ್ಲರೂ ಸದಾ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಬಲೇಶ್ವರ ಬೃಹನ್ಮಠದ ಮಹಾದೇವ ಶಿವಾಚಾರ್ಯರು, ಮುಖಂಡರಾದ ಈರನಗೌಡ ಬಿರಾದಾರ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲು ದಳವಾಯಿ, ಮುಖಂಡರಾದ ಶ್ರೀಶೈಲಗೌಡ ಪಾಟೀಲ ನಿಡೋಣಿ, ವಿ. ಎಸ್. ಪಾಟೀಲ, ವಿದ್ಯಾರಾಣಿ ತುಂಗಳ, ಉಮೇಶ ಮಲ್ಲನ್ನವರ, ಆನಂದ ಬೂದಿಹಾಳ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಲ್ಲನಗೌಡ ಬಿರಾದರ, ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ, ಅಗ್ನಿಶಾಮಕ ಸೇವೆ ಇಲಾಖೆ ಜಿಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.

