ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಮ್ಮೊಳಗಿನ ಚಿಂತೆ, ಆಯಾಸ, ದುಃಖ ದುಮ್ಮಾನುಗಳಿಗೆ ಹಾಗೂ ಒತ್ತಡ ಜೀವನಕ್ಕೆ ಸಂಗೀತವೇ ಉತ್ತಮ ಔಷಧಿಯಾಗಿದೆ ಎಂದು ಕನ್ನಡ ಸಾಹಿತ್ಯ ಗೆಳೆಯರ ಬಳಗದ ಅಧ್ಯಕ್ಷ ರಾಜಶೇಖರ ಕೂಚಬಾಳ ಹೇಳಿದರು.
ಪಟ್ಟಣದ ಬಸವ ಮಂಟಪದಲ್ಲಿ ಶ್ರೀ ರೇ.ಚ ರೇವಡಿಗಾರ (ರಿ) ಪ್ರತಿಷ್ಠಾನ ಹಮ್ಮಿಕೊಂಡ ಗುರು ಸ್ಮರಣೆ, ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಂಗೀತ ಮನಸ್ಸಿನ ಭಾರ ತಗ್ಗಿಸಿ, ನೆಮ್ಮದಿ ಮತ್ತು ಆರೋಗ್ಯಕರ ಜೀವನ ನಡೆಸಲು ಶಕ್ತಿಯ ಸಂಕೇತವಾಗಿದೆ ಎಂದರು.
ಪ್ರತಿಷ್ಠಾನದ ರಂಗನಾಥ್ ಥೋರ್ಪೆ ಮಾತನಾಡಿ, ಸಂಗೀತದಿಂದ ಜಗತ್ತನ್ನೆ ಬದಲಿಸಬಹುದು, ಸಂಗೀತ ಎಲ್ಲರನ್ನೂ ಒಂದುಗೂಡಿಸುವ ಕಲಾ ಸಂಪತ್ತು ಹೀಗಾಗಿ ಇಂದು ಹಿರಿಯ ಸಂಗೀತ ರತ್ನತ್ರೇಯರು, ಕಿರಿಯ ಪ್ರತಿಭಾನ್ವಿತ ಸಂಗೀತ ಯುವ ಕಲಾವಿದರ ಸಮ್ಮಿಲನವಾಗಲು ಸಾಧ್ಯವಾಗಿದೆ ಎಂದು ಪ್ರಾಸ್ತಾವಿಕ ಮಾತನಾಡಿದರು.
ಆರಕ್ಷಕ ಮೌಲಾಲಿ ಆಲಗೂರ ಮಾತನಾಡಿ, ಎಲೆಮರೆಯಾಗಿ ಉಳಿದ ಸಂಗೀತ ದಿಗ್ಗಜರನ್ನು ಹಾಗೂ ಯುವ ಕಲಾವಿದರನ್ನು ಒಟ್ಟಿಗೆ ಒಂದೇ ವೇದಿಕೆ ನೀಡಿರುವುದು ಶ್ಲಾಘನೀಯ ಎಂದರು.
ಇದೇ ವೇಳೆ ಹಿರಿಯ ಗಾಯಕರಾದ ರಾಜು ತಿವಾರಿ, ಮೌನಪ್ಪ ಪತ್ತಾರ, ಮುದ್ದುರಾಜ ಅಲ್ದಿ ತಮ್ಮ ಸುಮಧುರ ಕಂಠದಿಂದ ಸುಶ್ರಾವ್ಯವಾಗಿ ಹಾಡಿ ಚಪ್ಪಾಳೆ
ಗಿಟ್ಟಿಸಿಕೊಂಡರೆ, ಉದಯೋನ್ಮುಖ ಗಾಯಕಿಯರಾದ ಪೂಜಾ ಹಿರೇಮಠ, ಭಾಗ್ಯ ಬಬಲೇಶ್ವರ, ರಾಜೇಶ್ವರಿ ತಮ್ಮ ಅತ್ಯದ್ಭುತ ಗಾಯನವನ್ನು ಪ್ರಸುತ್ತ ಪಡಿಸಿದರು.
ದಯಾನಂದ ಪತ್ತಾರ ಹಾಗೂ ವಿನಾಯಕ ಕುಲ್ಕರ್ಣಿ ತಬಲಾ ಸಾತ ನೀಡಿದರು. ಶ್ರೀ ರೇ.ಚ ರೇವಡಿಗಾರ ಪ್ರತಿಷ್ಠಾನ ವತಿಯಿಂದ ರಾಜು ತಿವಾರಿ, ಮೌನಪ್ಪ ಪತ್ತಾರ, ಮುತ್ತುರಾಜ್ ಅಲ್ದಿ ಇವರಿಗೆ ಸಿಂದಗಿಯ ಸಂಗೀತ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅದೇ ಸಮಯದಲ್ಲಿ ಆರಕ್ಷಕ ಮೌಲಾಲಿ ಆಲಗೂರ ರಾಜು ತಿವಾರಿ ಹಾಡುತ್ತಿದ್ದ ಹಾಡನ್ನು ವಾಟ್ಸ್ ಆಪ್ ಸ್ಟೇಟಸ್ ಹಾಕಿದ್ದನ್ನು ತಕ್ಷಣವೇ ಗಮನಿಸಿದ ಕತಾರ ದೇಶದಲ್ಲಿ ನೆಲೆಸಿರುವ ಮಾಡಬಾಳ ಗ್ರಾಮದ ಅನಿಲ್ ಬೋಸಗಿ (ಕರ್ನಾಟಕ ಸಂಘದ ಅಧ್ಯಕ) ಕರೆ ಮಾಡಿ ಐದು ಸಾವಿರ ಪೋನ್ ಪೇ ಮೂಲಕ ರಾಜು ತಿವಾರಿ ಇವರಿಗೆ ತಲುಪಿಸಿದರು. ಇನ್ನೂ ರಾಜಶೇಖರ ಕೂಚಬಾಳ ಎಲ್ಲ ಕಲಾವಿದರಿಗೂ ಒಂದು ಸಾವಿರದಂತೆ ಹಾಗೂ ಕಾರ್ಯಕ್ರಮ ಆಯೋಜನೆ ಮಾಡಿದ ಪ್ರತಿಷ್ಠಾನಕ್ಕೆ ಐದು ಸಾವಿರ ನಗದು ಗೌರವಿತವಾಗಿ ನೀಡಿದರು. ಸಂಸ್ಥೆ ಕಾರ್ಯದರ್ಶಿ ಆನಂದ ಶಾಬಾದಿ, ಸಿದ್ಧಲಿಂಗ ಚೌಧರಿ, ಪಂಡಿತ ಯಂಪೂರೆ, ಮಹಾಂತೇಶ ನೂಲನವರ, ಗುರುನಾಥ ಅರಳಗುಂಡಗಿ, ಮೌಲಾಲಿ ಆಲಗೂರ, ಸೇರಿದಂತೆ ಇತರರು ಸಂಗೀತಕ್ಕೆ ಕಿವಿಯಾದರು.

