ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಚನಗಳಲ್ಲಿ ಜೀವನದ ಸಾರ ಅಡಗಿದ್ದು, ಸತ್ಯ ಪಥದ ನಡೆ-ನುಡಿ, ಸಮಾಜ ಸುಧಾರಣೆಯ ಮೌಲ್ವಿಕ ವಿಚಾರಗಳು ಬಸವಾದಿ ಶರಣರು ರಚನೆಯ ವಚನಗಳು ಬೆಳಕು ಚೆಲ್ಲುತ್ತವೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಡಪದ ಅಪ್ಪಣ್ಣನವರ ರಚನೆಯ ೧೫೦ಕ್ಕೂ ಹೆಚ್ಚು ವಚನಗಳು ಜೀವನದ ಸತ್ಯ, ಮಾನವೀಯ ಮೌಲ್ಯಗಳು ಹಾಗೂ ಮಾನವೀಯತೆಯನ್ನು ಪ್ರತಿಪಾದಿಸುತ್ತವೆ. ಸಮಾಜದ ಒಳಿತಿಗಾಗಿ ಶ್ರಮಿಸಿದ ಶರಣರು ಜನರಾಡುವ ಭಾಷೆಯಲ್ಲಿ ವಚನಗಳನ್ನು ಜನಮಾನಸಕ್ಕೆ ನೀಡಿ, ಸಮಾಜ ಸುಧಾರಣೆಗೆ ಅವರ ಕೊಡುಗೆ ಮಹತ್ತರವಾಗಿದೆ. ತನ್ನ ತಾನು ಅರಿತು ನಡೆಯಬೇಕೆಂಬ ಶರಣರ ಆಶಯದಂತೆ ನಡೆಯೋಣ ಯುವ ಪೀಳಿಗೆ ಶರಣ ಸಾಹಿತ್ಯ ಅಧ್ಯಯನ ಮಾಡುವ ಮೂಲಕ ವಚನಗಳಲ್ಲಿ ಸತ್ವ ತಿಳಿಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಬಿ.ಎಂ. ಪಾಟೀಲ ಮಾತನಾಡಿ, ಸತ್ಯ, ಶುದ್ಧತೆ, ಕಾಯಕ ಮತ್ತು ನಿಷ್ಠೆಯ ಮೌಲ್ಯಗಳನ್ನು ಪ್ರತಿಪಾದಿಸುವ ವಚನ ಸಾಹಿತ್ಯವು ಸಮಾಜಕ್ಕೆ ದಾರಿದೀಪವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ನಿರ್ದೇಶಕ ನಾಗಭೂಷಣ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಸಂತೋಷ್ ಭೋವಿ ಸೇರಿದಂತೆ ಭೀಮರಾಯ ಜಿಗಜಣಗಿ, ಸೋಮನಗೌಡ ಕಲ್ಲೂರ, ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮೆರವಣಿಗೆ ಚಾಲನೆ: ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿಗಳಾದ ಡಾ.ಔದ್ರಾಮ ಅವರು ಚಾಲನೆ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭ ಜಿಪಂ ಉಪ ನಿರ್ದೇಶಕ ನಾಗಭೂಷಣ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯ ನಿರ್ದೇಶಕರಾದ ಸಂತೋಷ ಭೋವಿ ಸಮಾಜದ ಮುಖಂಡರ ಬಸವರಾಜ ಶಿವಶರಣ , ಅಶೋಕ ನಾವಿ, ಭೀಮರಾಯ ಜಿಗಜಿಣಗಿ, ಸೋಮನಾಥ ಕಲ್ಲೂರ ಇದ್ದರು.

