ಆನ್ ಲೈನ್-ಆಪ್ ಲೈನ್ ಮಾರುಕಟ್ಟೆ ಸಂಘರ್ಷಕ್ಕೆ ತೆರೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತೂಕದಲ್ಲಿ ಮೋಸ, ಆಕ್ಷನ್ ನೆಪದಲ್ಲಿ ತೂರಾಟ ನಡೆಸಿ ಅನಾವಶ್ಯಕವಾಗಿ ರೈತರ ಉತ್ಪನ್ನ ಹಾಳಾಗುವುದನ್ನು ತಪ್ಪಿಸಲು ಹಾಗೂ ಪಾರದರ್ಶಕ ವಹಿವಾಟಿಗಾಗಿ ಆನ್ ಲೈನ್ ಟ್ರೇಡಿಂಗ್ ಮಾರುಕಟ್ಟೆಗೆ ಮೊದಲ ಆದ್ಯತೆ ನೀಡಬೇಕು. ಹೀಗಾಗಿ ಕಡ್ಡಾಯವಾಗಿ ವಾರದಲ್ಲಿ ಎರಡು ಭಾರಿ ಆನಲೈನ್ ಟ್ರೇಡಿಂಗ್ ಮಾರುಕಟ್ಟೆಯಲ್ಲೇ ಒಣ ದ್ರಾಕ್ಷಿ ವಹಿವಾಟು ನಡೆಸಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಎಪಿಎಂಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ವಿಜಯಪುರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಮಂಗಳವಾರ ಎಪಿಎಂಸಿ ಆಡಳಿತಾಧಿಕಾರಿ ಮತ್ತು ಕಾರ್ಯದರ್ಶಿಗಳ ಸಮ್ಮುಖದಲ್ಲಿ ನಡೆಸಿದ ದ್ರಾಕ್ಷಿ ಬೆಳೆಗಾರರ ಸಭೆಯಲ್ಲಿ ಮಾತನಾಡಿದ ಅವರು, ದ್ರಾಕ್ಷಿ ಬೆಳೆಗಾರರ ಅನುಕೂಲಕ್ಕಾಗಿ ನಗರದಲ್ಲಿ ಆನ್ ಲೈನ್ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದ್ದು, ಅದಕ್ಕೆ ಹೆಚ್ಚಿನ ಆದ್ಯತೆ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು.
ತಾತ್ಕಾಲಿಕವಾಗಿ ವಾರದಲ್ಲಿ ಒಮ್ಮೆ ಮಾತ್ರ ಆಫ್ ಲೈನ್ ಮೂಲಕ ವಹಿವಾಟು ನಡೆಯಲಿ. ಆದರೆ, ಕಡ್ಡಾಯವಾಗಿ ಆನಲೈನ್ ಟ್ರೇಡಿಂಗ್ ಮಾರುಕಟ್ಟೆ ವ್ಯವಸ್ಥೆಯಲ್ಲಿ ಪಾಲಿಸುವ ಮಾರ್ಗಸೂಚಿಗಳು ಮತ್ತು ನಿಯಮಗಳನ್ನೇ ಪಾಲಿಸಬೇಕು. ಇದರ ಸಾಧಕ-ಬಾಧಕ ನೋಡಿ ಮುಂದುವರೆಸಬೇಕೋ ಬೇಡ ಎನ್ನುದರ ಬಗ್ಗೆ ತಿರ್ಮಾನ ಮಾಡೋಣ ಎಂದು ಸಭೆಗೆ ತಿಳಿಸಿದರು.
ಆನ್ ಲೈಕ್ ಮಾರುಕಟ್ಟೆಯಿಂದ ರೈತರಿಗೆ ಯಾವುದೇ ರೀತಿಯ ಮೋಸ ಆಗುವುದಿಲ್ಲ. ಆಪಲೈನ್ ವ್ಯವಸ್ಥೆ ವರ್ತಕರಿಗೆ ಈವರೆಗೆ ರೈತರು ನೀಡುತ್ತಿದ್ದ ಶೇ 2 ರಷ್ಟು ಕಮಿಷನ್ ಸಹ ಉಳಿಯಲಿದೆ. ಹೀಗಾಗಿ ರೈತ ವಿರೋಧಿ ಮತ್ತು ವರ್ತಕರ ವಿರೋಧಿಯಾದ ಖಾಸಗಿ ಅಸೋಸಿಯೇಷನ್ ನಿಯಮಗಳನ್ನು ತಕ್ಷಣ ರದ್ದುಪಡಿಸಬೇಕು ಎಂದು ಸೂಚನೆ ನೀಡಿದರು.
ಸರ್ಕಾರಕ್ಕೂ ಆದಾಯ: ಎಪಿಎಂಸಿ ನಿಯಮಾವಳಿ ಮತ್ತು ಅಧಿಕಾರಿಗಳ ಸಮ್ಮುಖದಲ್ಲೇ ವ್ಯಾಪಾರ ನಡೆಯುವುದರಿಂದ ವಹಿವಾಟಿನ ನಿಖರ ಮಾಹಿತಿ ಸಿಗುತ್ತದೆ. ಆಗ ಸರ್ಕಾರಕ್ಕೆ ದೊರೆಯಬೇಕಾದ ಸೆಸ್ ಮತ್ತು ಜಿ.ಎಸ್.ಟಿ ಮೂಲಕ ಹೆಚ್ಚಿನ ಆದಾಯ ದೊರೆಯಲಿದೆ. ಎಪಿಎಂಸಿ ಯಲ್ಲಿ ಪರವಾನಗಿ ಪಡೆಯುವ ಪ್ರತಿಯೊಬ್ಬ ವರ್ತಕರು ಆನ್ ಲೈನ್ ಮತ್ತು ಆಪಲೈನ್ ದಲ್ಲಿ ಖರೀದಿ ಮಾಡಲು ಅವಕಾಶ ಕಲ್ಪಿಸಬೇಕು. ಪರವಾನಗಿ ಕೋರಿ ಅರ್ಜಿ ಸಲ್ಲಿಸುವ ವರ್ತಕರಿಗೆ ವಿನಾಕಾರಣ ಸತಾಯಿಸದೇ ನಿಯಮಾವಳಿ ಪ್ರಕಾರ ಪರವಾನಗಿ ನೀಡಬೇಕು. ವರ್ತಕರ ಸಂಖ್ಯೆ ಹೆಚ್ಚಾದರೆ, ಆಗ ನಮ್ಮಲ್ಲಿಯೇ ವ್ಯಾಪಾರ ಕೂಡ ಅಧಿಕ ಆಗುವುದರಿಂದ, ರೈತರಿಗೆ ಬೆಲೆಯೂ ಹೆಚ್ಚಿಗೆ ಸಿಗುತ್ತದೆ. ಇದರೊಂದಿಗೆ ನಮ್ಮ ರಾಜ್ಯದಿಂದ ಬೇರೆ ರಾಜ್ಯಕ್ಕೆ ಹೋಗುವ ಲಾಭ ತಪ್ಪಿಸಲು ಸಹ ನೆರವಾಗಲಿದೆ ಎಂದು ಹೇಳಿದರು.
ದೇಶದ ಯಾವುದೇ ರಾಜ್ಯದ ವರ್ತಕರು ಆನಲೈನ್ ಮತ್ತು ಆಪ್ ಲೈನ್ ಮಾರುಕಟ್ಟೆ ವಹಿವಾಟಿನಲ್ಲಿ ಭಾಗವಹಿಸಲು ಅವಕಾಶವಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು. ವಿಜಯಪುರ ದ್ರಾಕ್ಷಿ ಬೆಳೆಗೆ ಉತ್ತೇಜನ ನೀಡಲು ಹಾಗೂ ರೈತರಿಗೆ ಹೆಚ್ಚಿನ ಲಾಭ ದೊರಕಿಸಿ ಕೊಡಲು 140 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣ ಆಗುತ್ತಿರುವ ವೈನ್ ಪಾರ್ಕ್ ಗೆ, ಈ ಆನ್ ಲೈನ್ ಮಾರುಕಟ್ಟೆ ವ್ಯವಸ್ಥೆಯ ವಹಿವಾಟು ತಳಪಾಯ ಆಗಲಿದೆ ಎಂದು ಅಭಿಪ್ರಾಯ ಪಟ್ಟರು.
ದ್ರಾಕ್ಷಿ ಮತ್ತು ವೈನ್ ಬೋರ್ಡ್ ಮಾಜಿ ಅಧ್ಯಕ್ಷರಾದ ಎಂ.ಎಸ್.ರುದ್ರಗೌಡ, ದ್ರಾಕ್ಷಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಅಭಯಕುಮಾರ ನಾಂದ್ರೇಕರ, ಜಿಲ್ಲಾಧ್ಯಕ್ಷ ಎಂ.ಎಸ್.ಲೋಣಿ, ಎಪಿಎಂಸಿ ಆಡಳಿತಾಧಿಕಾರಿ ಆರ್.ಆದಪ್ಪ, ಕಾರ್ಯದರ್ಶಿ ಅಲ್ಲಾಭಕ್ಷ ಬಿಜಾಪುರ ಸೇರಿದಂತೆ ದ್ರಾಕ್ಷಿ ಬೆಳೆಗಾರರು, ವರ್ತಕರು ಉಪಸ್ಥಿತರಿದ್ದರು.
ಸಭೆಯ ತಿರ್ಮಾನಗಳು
ವಾರದಲ್ಲಿ ಎರಡು ಬಾರಿ ಆನಲೈನ್ ಮೂಲಕ ಮತ್ತು ತಾತ್ಕಾಲಿಕವಾಗಿ ಒಂದು ಬಾರಿ ಆಫ್ ಲೈನ್ ಮೂಲಕ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿಯಲ್ಲಿ ನಿರ್ಮಾಣ ಮಾಡಲಾದ ಆನ್ ಲೈನ್ ಟ್ರೇಡಿಂಗ್ ಮಾರುಕಟ್ಟೆ ಪ್ರಾಂಗಣದಲ್ಲೇ ಕಡ್ಡಾಯವಾಗಿ ವಹಿವಾಟು ನಡೆಸಲು ಹಾಗೂ ಕಾನೂನು ಬಾಹಿರವಾದ ಖಾಸಗಿ ಅಸೋಸಿಯೇಷನ್ ನಿಯಮಗಳನ್ನು ರದ್ದುಪಡಿಸಲು ಶಾಸಕರ ನೇತೃತ್ವದಲ್ಲಿ ಹಾಗೂ ಎಪಿಎಂಸಿ ಆಡಳಿತಾಧಿಕಾರಿ ಮತ್ತು ಕಾರ್ಯದರ್ಶಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ತಿರ್ಮಾನಿಸಿ, ಠರಾವು ಪಾಸ್ ಮಾಡಲಾಯಿತು.

