ಉದಯರಶ್ಮಿ ದಿನಪತ್ರಿಕೆ
ಇಂಡಿ: ಸ್ಥಳೀಯ ಸಂಸ್ಥೆಗಳ ಚುನಾವಣಾ ಪೂರ್ವ ಸಿದ್ಧತೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಎಸ್ಐಆರ್ ನೋಂದಣಿ ಪ್ರಕ್ರಿಯೆಯನ್ನು ತಮ್ಮ ವ್ಯಾಪ್ತಿಯಲ್ಲಿ ಪ್ರತಿಶತ ನೂರರಷ್ಟು (೧೦೦%) ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದ ಬಿ.ಎಲ್.ಒ ವೈಷ್ಣವಿ ಉಮರ್ಜಿ ಅವರನ್ನು ಅಧಿಕಾರಿಗಳು ಸತ್ಕರಿಸಿ, ಗೌರವಿಸಿದರು.
ಇಂಡಿ ನಗರದ ನಗರಸಭಾ ಕಾರ್ಯಾಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಹಾಗೂ ಇಂಡಿ ಪುರಸಭೆ ಪೌರಾಯುಕ್ತ ಶಿವಾನಂದ ಪೂಜಾರಿ ಅವರು ವೈಷ್ಣವಿ ಉಮರ್ಜಿ ಅವರಿಗೆ ಶಾಲು ಹೊದಿಸಿ, ಸನ್ಮಾನ ಪತ್ರ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ “ಎಸ್ಐಆರ್ ನೋಂದಣಿ ಕಾರ್ಯವು ಅತ್ಯಂತ ಜವಾಬ್ದಾರಿಯುತ ಹಾಗೂ ನಿಗದಿತ ಅವಧಿಯೊಳಗೆ ಮುಗಿಸಬೇಕಾದ ಕೆಲಸವಾಗಿದೆ. ಇಂತಹ ಮಹತ್ವದ ಕಾರ್ಯವನ್ನು ಬಿ.ಎಲ್.ಒ ವೈಷ್ಣವಿ ಉಮಾರ್ಜಿ ಅವರು ನಿಷ್ಠೆಯಿಂದ ನಿರ್ವಹಿಸಿ, ಶೇ. ೧೦೦ ರಷ್ಟು ಪ್ರಗತಿ ಸಾಧಿಸಿರುವುದು ಶ್ಲಾಘನೀಯ. ಇವರ ಕರ್ತವ್ಯ ಪ್ರಜ್ಞೆ ಇತರರಿಗೂ ಮಾದರಿಯಾಗಿದೆ” ಎಂದು ಪ್ರಶಂಸಿಸಿದರು.
ಪೌರಾಯುಕ್ತ ಶಿವಾನಂದ ಪೂಜಾರಿ ಅವರು ಮಾತನಾಡಿ, “ಚುನಾವಣಾ ಕಾರ್ಯಗಳಲ್ಲಿ ಬಿ.ಎಲ್.ಒಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ, ನೂರಕ್ಕೆ ನೂರರಷ್ಟು ಸಾಧನೆ ಮಾಡಿದ ವೈಷ್ಣವಿ ಅವರ ಕಾರ್ಯವೈಖರಿ ಎಲ್ಲರಿಗೂ ಪ್ರೇರಣೆಯಾಗಲಿ” ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಇಂಡಿ ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶ್ರೀಕಾಂತ ಕೂಡಿಗನೂರ, ಮುಖಂಡ ಸುದೀರ ಕರಿಕಟ್ಟಿ, ನಗರಸಭೆ ಕಂದಾಯ ಅಧಿಕಾರಿ ಸದಾಶಿವ ನಿಂಬಾಳ್ಕರ್, ಕಿರಿಯ ಆರೋಗ್ಯ ನಿರೀಕ್ಷಕಿ ಸಂಗೀತಾ ಕೋಳಿ ಸೇರಿದಂತೆ ತಹಸೀಲ್ದಾರ್ ಕಚೇರಿ ಹಾಗೂ ಪುರಸಭೆಯ ಸಿಬ್ಬಂದಿ ಉಪಸ್ಥಿತರಿದ್ದರು.

