ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದಲ್ಲಿ ವಾಸಿಸುವ ೧೨೦ಕ್ಕೂ ಅಧಿಕ ಮಾಜಿ ಸೈನಿಕರಿಗೆ ಬಹುದಿನಗಳಿಂದ ನಿರೀಕ್ಷಿತವಾಗಿದ್ದ ಸಮುದಾಯ ಭವನ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ನಗರದ ಮಾಂಗಲ್ಯ ಭವನದ ಹಿಂಭಾಗದಲ್ಲಿ ನಿರ್ಮಾಣಗೊಳ್ಳಲಿರುವ ೨೦೨೫-೨೬ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಅಂದಾಜು ರೂ.೨೫ಲಕ್ಷ ವೆಚ್ಚದಲ್ಲಿ ಮಾಜಿ ಸೈನಿಕರ ಸಮುದಾಯ ಭವನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಭವನವು ಮಾಜಿ ಸೈನಿಕರು ತಮ್ಮ ಸಭೆಗಳು, ಸಮಾರಂಭಗಳು, ಸಂಘದ ಸಭೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಗೌರವ ಸಮಾರಂಭಗಳು ಹಾಗೂ ಇತರೆ ಸಾಮಾಜಿಕ ಚಟುವಟಿಕೆಗಳನ್ನು ಒಂದೇ ಸೂರಿನಡಿ ಆಯೋಜಿಸಲು ಅನುಕೂಲವಾಗಲಿದೆ. ಇದೀಗ ನಿರ್ಮಾಣವಾಗುತ್ತಿರುವ ಸಮುದಾಯ ಭವನದಿಂದ ಅವರ ಸಂಘಟನಾ ಚಟುವಟಿಕೆಗಳಿಗೆ ಹೊಸ ಉತ್ತೇಜನ ದೊರೆಯಲಿದೆ ಎಂದರು.
ಈ ವೇಳೆ ಪೌರಾಯುಕ್ತ ರವಿ ಶಿರಗುಪ್ಪ, ವಿ.ಬಿ.ಕುರಡಿ, ಮುತ್ತು ಮುಂಡೇವಾಡಗಿ, ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಅಶೋಕ ಕೋಳಾರಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀಶೈಲ ಯಳಮೇಲಿ, ಭೀಮನಗೌಡ ಗೋಲಗೇರಿ, ಶಾಂತು ರಾಣಾಗೋಳ, ಶಾಂತು ದುರ್ಗಿ ಸೇರಿದಂತೆ ಸಿಂದಗಿ ಭಾಗದ ದೇಶದ ಹೆಮ್ಮೆಯ ನಿವೃತ್ತ ಸೈನಿಕರು, ಹಿರಿಯರು, ಗಣ್ಯರು ಹಾಗೂ ದೇಶಾಭಿಮಾನಿ ಸಾರ್ವಜನಿಕರು ಇದ್ದರು.

